ಸೋಮವಾರ, ಡಿಸೆಂಬರ್ 19, 2011

ಧ್ಯಾನದೆತ್ತರಕ್ಕೆ ಏರುವ ಮುನ್ನ ತಯ್ಯಾರಿ ಬೇಕಲ್ಲವೆ?

ಧ್ಯಾನದೆತ್ತರಕ್ಕೆ ಏರುವ ಮುನ್ನ ತಯ್ಯಾರಿ ಬೇಕಲ್ಲವೆ?

“ಧ್ಯಾನ ಮಾಡುವ” “ಮೆಡಿತೇಶನ್ ಕ್ಲಾಸ್ ಗೆ ಹೋಗುತ್ತೇವೆ” ಎನ್ನುವ ಟ್ರೆಂಡ್ ಎಲ್ಲೆಲ್ಲೂ ಕಾಣಬರುತ್ತಿದೆ. ನಿಜ, ನಾಗರೀಕತೆಯ ಯಾಂತ್ರಿಕತೆಯಿಂದ ಉಸುರುಗಟ್ಟಿ, ಹಣ, ವಸ್ತು, ದ್ರವ್ಯಗಳ ಜಡಜಗತ್ತಿನಲ್ಲಿ ನೀರಸತೆಯನ್ನು ಕಂಡವರಿಗೆ, ಧ್ಯಾನದ ಶಾಂತಿ ಆನಂದಗಳು ಬೇಕೆನಿಸುವುದು ಸಹಜವೆ. ಆದರೆ ಧ್ಯಾನ ಎಂದರೇನು? ಅದಕ್ಕೆ ಬೇಕಾದ ಮನೋಭೂಮಿಕೆ ಯಾವುದು? ಧ್ಯಾನದೆತ್ತರಕ್ಕೆ ಏರುವ ಮುನ್ನ ತಯ್ಯಾರಿ ಬೇಕಲ್ಲವೆ?
ಮನಸ್ಸು ’ಗಾಳಿಯಂತೆ ಹಿಡಿಯಲಾಗದಂತಹದ್ದು’ (ವಾಯೋರಿವ ಸುದುಷ್ಕರಂ) ಎನ್ನುತ್ತದೆ ಗೀತೆ. ಸುಮ್ಮನಿರುವುದು, ಅಥವಾ ಒಂದೇ ವಿಷಯದಲ್ಲಿ ತದೇಕವಾಗಿ ನಿಲ್ಲುವುದು ಇದಕ್ಕೆ ಕಷ್ಟಸಾಧ್ಯ. ಕಳೆದು ಹೋದ ಸುಖದುಃಖಗಳನ್ನೋ, ಅಥವಾ ಮುಂದೆ ಏನಾದೀತೆಂಬ ಆತಂಕವನ್ನೋ ಕಟ್ಟಿಕೊಂಡು ತೊಳಲಾಡುತ್ತದೆ. ಇಂತಹ ಮನಸ್ಸನ್ನು ಪಳಗಿಸಿ ಧ್ಯಾನದಲ್ಲಿ ತೊಡಗಿಸುವುದು ಒಂದು ಸಾಹಸವೇ ಸರಿ. ಧ್ಯಾನ ಸಾಧ್ಯವಾಗಬೇಕಾದರೆ, ಮನಸ್ಸು ತನ್ನ ಜಾಢ್ಯ, ಒರಟುತನ, ಬಹುಮುಖಗಮನಗಳನ್ನು ಬಿಟ್ಟು ಬಹಳ ಸೂಕ್ಷ್ಮವೂ ಸ್ಥಿರವೂ ಆಗಬೇಕು. ಆಗ ಮಾತ್ರ ಅಂತರ್ದೃಷ್ಟಿ ಬೆಳೆದು ಒಂದು ವಿಷಯದ ಆಳಕ್ಕಿಳಿದು ಧ್ಯಾನತಲ್ಲೀನವಾಗಲು ಸಾಧ್ಯ. ಆದರೆ ಈ ಚಂಚಲ ಮನಸ್ಸನ್ನು ಪಳಗಿಸಲು ಏನು ಮಾಡಬೇಕು, ಎಲ್ಲಿಂದ ಪ್ರಾರಂಭಿಸಬೇಕು? ಎನ್ನುವುದೇ ಪ್ರಶ್ನೆ.
ನಮ್ಮ ಪ್ರಾಜ್ಞರು ಮನಸ್ಸನ್ನೇ ವಿಶೇಷವಾಗಿ ಅಧ್ಯಯನ ಗೈದರು, ಅದರ ವಿವಿಧ ಭಾವ ವೈಕಾರ್ಯಗಳ ಹಿನ್ನಲೆ, ಅನಿವಾರ್ಯತೆ, ಪ್ರಚೋದನೆಗಳನ್ನು ಸಂಶೋಧಿಸಿದರು. ಒಟ್ಟಾರೆ ಅವರು ಕಂಡು ಕೊಂಡ ಸತ್ಯವೆಂದರೆ ಮನಸ್ಸನ್ನು ಏಕಾಏಕಿ ಮೇಲೇರಿಸಲಾಗದು, ಆದರೆ ಹಂತಹಂತವಾಗಿ ಸೂಕ್ಷ್ಮತ್ವದ ಎತ್ತರಕ್ಕೆ ಏರಿಸಬೇಕು. ಮನಸ್ಸನ್ನು ಮೊದಲು ಸ್ಥೂಲವಾದರೂ ಸುಂದರವೂ ಸುಸಂಸ್ಕೃತವೂ ಆದ ಸಾಹಿತ್ಯ, ಕಲೆ, ಸೇವೆ, ಲೋಕಸಂಗ್ರಹ ಮುಂತಾದ ರಚನಾತ್ಮಕ ಕಲಾಪಗಳಲ್ಲಿ ಹಾಗೂ ಉದಾತ್ತ ಚಿಂತನೆಗಳಲ್ಲಿ ತೊಡಗಿಸಬೇಕು. ತನ್ಮೂಲಕ ಅದು ಪಳಗಿ, ಸಂಸ್ಕೃತವಾಗಿ, ಉದಾತ್ತೀಕೃತವಾದಾಗ ಧ್ಯಾನ ಸುಲಭವಾಗುತ್ತ ಬರುತ್ತದೆ.
ಮನಸ್ಸಿನ ಸಂಸ್ಕಾರಕ್ಕಾಗಿಯೇ ನಮ್ಮ ಈ ಸನಾತನ ಸಂಸ್ಕೃತಿಯು ಹುಟ್ಟಿದ್ದು, ಬೆಳೆದದ್ದು, ಅರಳಿದ್ದು ಎನ್ನುವುದು ನಿಶ್ಚಯ. ಧರ್ಮ, ಸಂಗೀತ, ಕಲೆ, ಸೇವೆ, ಆತಿಥ್ಯ, ದೇಗುಲ ಪರಂಪರೆ, ಇತ್ಯಾದಿ ಎಲ್ಲ ಅಂಶಗಳು ಮನಸ್ಸಿನ ಪಾಕಕ್ಕೆ ಸುಂದರ ಹೇತುಗಳೆ ಸರಿ. ಡಿ ವಿ ಜಿ ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಹೀಗೆ ಹೇಳುತ್ತಾರೆ-
ದೇವಮಂದಿರ ಭಜನೆ ಪೂಜೆ ಪ್ರಸಾದಗಳು ಜೀವನದಲಂಕಾರ ಮನಸಿನುದ್ಧಾರ
ಭಾವವಂ ಕ್ಷುಲ್ಲಜಗದಿಂ ಬಿಡಿಸಿ ಮೇಲೊಯ್ವುದಾವುದಾದೊಡಮೊಳಿತು ಮಂಕುತಿಮ್ಮ
ಒಂದಷ್ಟು ವ್ಯಕ್ತಿಗಳೊ, ವಸ್ತುಗಳೊ, ಘಟನೆಗಳೊ, ನೆನಪುಗಳೊ ನಮ್ಮ ಮನಸ್ಸಿನ ಎಲ್ಲ ಸಮಯ ಹಾಗೂ ಶಕ್ತಿಗಳನ್ನು ಅಪಹರಿಸಿಬಿಟ್ಟಿರುತ್ತವೆ ಎನ್ನುವುದು ಸ್ವಲ್ಪ ಗಮನಿಸಿ ನೋಡಿದರೆ ನಮಗೇ ತಿಳಿಯುತ್ತದೆ. ಜೊತೆಗೆ ತತ್ಸಂಬಂಧಿತ ರಾಗದ್ವೇಷಗಳೂ ಮನಸ್ಸಿನಲ್ಲಿ ಯಾವಾಗಲೂ ಕುದಿಯುತ್ತಿರುತ್ತವೆ. ಹೀಗಾಗಿ ಮನಸ್ಸಿಗೆ ವಿಶ್ರಾಂತಿಯೇ ಇಲ್ಲ, ಸದಾ ಭಾವಕಲ್ಲೋಲ! ಮನಸ್ಸನ್ನು ಈ ಕ್ಷುಲ್ಲಕ ಗಂಟುಗಳಿಂದ ಬಿಡಿಸಿ ರಾಗದ್ವೇಷರಾಹಿತ್ಯದ ಸ್ವಾತಂತ್ರ್ಯದ ಎತ್ತರಕ್ಕೆ ಎತ್ತುವುದಕ್ಕೆ ಯಾವುದಾದರೂ ಮಾಧ್ಯಮ ಬೇಕು. ಭಜನೆ, ಸತ್ಸಂಗ, ಜಪ, ವ್ರತ, ಪೂಜೆ, ಅಲಂಕಾರ, ಉತ್ಸವ, ಸಂಭ್ರಮ, ತೀರ್ಥಾಟನೆ, ದಾನ, ಧರ್ಮ, ಅಥವಾ ಕಲೆ, ಸಾಹಿತ್ಯ, ಕೃಷಿ, ಸಮಾಜ ಸೇವೆ, ಜಿಜ್ಞಾಸೆ ಮುಂತಾದವು ಅನಾದಿಯಿಂದ ಸಮರ್ಥ ಮಾಧ್ಯಮಗಳಾಗಿ ಮನುಕುಲವನ್ನು ಉನ್ನತಿಗೇರಿಸುತ್ತ ಬಂದಿವೆ. ಇದನ್ನು ಕಂಡು ಕೊಂಡ ನಮ್ಮ ಋಷಿಗಳು ಧರ್ಮ ಸಂಸ್ಕೃತಿಗಳ ಚೌಕಟ್ಟಿನಲ್ಲಿ ಇವುಗಳನ್ನು ಹೆಣೆದು ಮನುಕುಲಕ್ಕೆ ವಿಧಿಸಿದರು. ಈ ಮೂಲೋದ್ದೇಶವನ್ನು ಅವಗಣಿಸಿ, ಕೇವಲ ಮತೀಯ ದೃಷ್ಟಿಯಿಂದಲೋ, ದೂಷಣೆಯ ದೃಷ್ಟಿಯಿಂದಲೋ ನೋಡಿದಾಗ ಈ ಎಲ್ಲವುಗಳಲ್ಲಿ ಕೇವಲ ’ನಂಬಿಕೆ’ಯೊಂದೇ ಪ್ರಧಾನವಾಗಿ ಕಾಣಬರಬಹುದು. ಆದರೆ ನೈಜದಲ್ಲಿ ಮಾನವನ ಮನಸ್ಸು ಈ ಎಲ್ಲವುಗಳ ಮೂಲಕ ಭಾವೋನ್ನತಿಯನ್ನು ಅರಸುತ್ತಿದೆ ಎನ್ನುವುದೇ ಸತ್ಯ. ಹಾಗಿಲ್ಲದಿದ್ದಲ್ಲಿ ಕಾಲಗರ್ಭದಲ್ಲಿ ಇವೆಲ್ಲ ಎಂದೋ ಅಳಿದು ಮರೆತು ಹೋಗಿಬಿಡುತ್ತಿದ್ದವು. ಆದರೆ ಕಾಲಕಾಲಕ್ಕೂ ಇದೇ ಅಂಶಗಳು ನವನವೀನ ಊಪಗಳಲ್ಲಿ ಮರುಕಳಿಸುವುದನ್ನು ನೋಡಿದಾಗ ಮನುಷ್ಯಹೃದಯದ ಭಾವಾಭಿವ್ಯಕ್ತಿಯ, ಭಾವೋನ್ನತಿಯ ಹಂಬಲ ಸ್ಪಷ್ಟವಾಗುತ್ತದೆ.
ನೀಚ ವಾಸನೆಗಳು ನೀಗಿ ಜೀವನಕ್ಕೆ ಅರ್ಥವನ್ನೂ ಬಣ್ಣವನ್ನೂ ತುಂಬುವಂತಹ ಉದಾತ್ತ ಅಭಿರುಚಿಯ ವಿಷಯಗಳು ಬೇಕು. ದೇಗುಲದ ಶಾಂತ ಪರಿಸರ, ಅಲ್ಲಿನ ಆ ಶಿಲ್ಪಸೌಂದರ್ಯ, ಭವ್ಯ ಆದರ್ಶಗಳನ್ನೂ, ತಾತ್ವಿಕ ಸತ್ಯಗಳನ್ನೂ ಸಾರುವ ದೇವತಾ ಮೂರ್ತಿಗಳ ದರ್ಶನ, ಪ್ರಾರ್ಥನೆ ಭಜನೆಗಳ ಮೂಲಕ ಹರಿಯುವ ಮುಗ್ಧಭಾವ ಭಕ್ತಿಗಳ ಅಮೃತಾಸ್ವಾದ, ಸಂಗೀತ-ನೃತ್ಯ-ನಾಟಕಾದಿಗಳ ವಿಲಾಸ, ಪೂಜೆ-ಸಮರ್ಪಣೆಗಳಲ್ಲಿನ ತನ್ಮಯಭಾವ, ಜಾತ್ರೆ ಉತ್ಸವಗಳಲ್ಲಿನ ಸಾತ್ವಿಕ ಸಡಗರ ಸಂಭ್ರಮ, ಕಲಾಭಿಜ್ಞತೆ, ದಾನಾದಿ ಕಾರ್ಯಗಳಲ್ಲಿನ ಕೃತಾರ್ಥ ಭಾವ, ಸಜ್ಜನರೊಂದಿಗಿನ ಸಂಗದ ಹೆಜ್ಜೇನಸವಿ, ಬಂಧುಮಿತ್ರರೊಂದಿಗಿನ ಸರಸ ಸಲ್ಲಾಪಗಳು--- ಹೀಗೆ ಇದೆಲ್ಲವೂ ನಮ್ಮ ಮನಸ್ಸಿಗೆ ಪ್ರಿಯಕರ, ಹಿತಕರ ಹಾಗೂ ಉಲ್ಲಾಸಕರ. ವ್ರತಗಳ ಮೂಲಕ ಮನಸ್ಸಿನ ಚಾಂಚಲ್ಯ ಚಾಪಲ್ಯಗಳು ನೀಗಿದರೆ, ಜಪದ ಮೂಲಕ ಶಕ್ತಿ ಏಕಾಗ್ರತೆಗಳು ಬಲಿಯುತ್ತವೆ. ಇವೆಲ್ಲ ನಮ್ಮಲ್ಲಿ ಒಂದು ಸಾತ್ವಿಕತೆಯ ನೆಲೆಯನ್ನು ತೆರೆದಿಡುವುದು ನಿಸ್ಸಂಶಯ. ತತ್ಕಾಲಕ್ಕಾದರೂ ಮನಸ್ಸು ತನ್ನ ಜಡಗಟ್ಟಿದ ದುಃಖದುಮ್ಮಾನಗಳ ನೆನಪಿನಿಂದ ಹಾಗೂ ಭೂತ-ಭವಿಷ್ಯಗಳ ಜಾಲದಿಂದ ಮುಕ್ತವಾಗಿ ವರ್ತಮಾನದಲ್ಲಿ ಸುಖಿಸಿ ನಲಿಯುತ್ತದೆ, ತಣಿಯುತ್ತದೆ. ಹೀಗೆ ಅನಿಮಿತ್ತ ಸುಖವನ್ನು, ಕೆಲಸಗಳ ಯಾಂತ್ರಿಕತೆಯನ್ನು ಕೆಲಕಾಲವಾದರು ಬದಿಗಿಟ್ಟು ನಿರ್ಮಲ ಆನಂದವನ್ನು, ಅನುಭವಿಸಿದಾಗ ಮನಸ್ಸು ತಿಳಿಯಾಗುತ್ತದೆ, ಹಗುರವಾಗುತ್ತದೆ.
ಆಗ ಅಂತರಂಗದಲ್ಲಿ ಸದಾ ನಡೆಯುತ್ತಲೇ ಇರುವ ಸುಪ್ತವೋ ಅಸ್ಪಷ್ಟವೋ ಆದ ಯಾವುದೋ ಜಿಜ್ಞಾಸೆ ವ್ಯಕ್ತವಾಗುತ್ತ ಬರುತ್ತದೆ, ’ಚಿಂತೆ’ ನಿಂತು ’ಚಿಂತನೆ’ ಉಕ್ಕುತ್ತದೆ, ಚಿಂತನೆಯು ಸತ್ಯ ಸೌಂದರ್ಯಗಳ ಅನ್ವೇಷಣೆಯಲ್ಲಿ ತೊಡಗಲು ಬೇಕಾದ ಸೂಕ್ತ ಶಾಂತ ಮನೋಭೂಮಿಕೆ ಒದಗುತ್ತದೆ. ಚಿಂತನೆ ಬಲಿತಂತೆ, ಸತ್ಯ, ಶಿವ ಸೌಂದರ್ಯಗಳ ಅನುಭವ ತೀವ್ರವಾಗುತ್ತ ಹೋಗುತ್ತದೆ. ಜೀವನದ ಗುರಿ, ಅರ್ಥ, ಧ್ಯೇಯ, ಆದರ್ಶಗಳನ್ನರಸಿ ನಮ್ಮ ಅಂತರಂಗ ವಿಕಾಸದ ಹಾದಿ ಹಿಡಿಯುತ್ತ ಹೋದಂತೆ, ಮನಸ್ಸಿಗೆ ಗ್ರಹಣದಂತೆ ಹಿಡಿದ ರಾಗ ದ್ವೇಷಗಳು ಬಲಗುಂದಿ ಕಲಚಿ ಬೀಳತೊಡಗುತ್ತವೆ. ಮನುಷ್ಯ ತನ್ನೊಳಗೆ ಶಾಂತಿ ಶಮೆ ಕ್ಷಮೆ ಸೌಹಾರ್ದ ಸ್ನೇಹಗಳ ಊಟೆಯನ್ನು ಕಂಡುಕೊಂಡು ಸುಖಿಸಲಾರಂಭಿಸುತ್ತಾನೆ. ಇದ್ದಲ್ಲಿಯೇ ಸ್ವರ್ಗವನ್ನು ಕಾಣತೊಡಗುತ್ತಾನೆ. ಕಡಪೇ ಕೈಲಾಸಂ ವಾಕಿಲೇ ವೈಕುಂಠಂ (ಮನೆಯ ಹೊಸಿಲೆ ಕೈಲಾಸ, ಬಾಗಿಲೇ ವೈಕುಂಠ) ಎನ್ನುವ ಮಾತನ್ನು ನಮ್ಮ ಅಜ್ಜಿ ಹೇಳುತ್ತಿದ್ದರು! ಈ ಸ್ಥಿತಿ ಒದಗಿದಾಗ ಶಾಂತಿಗಾಗಿ ಮುಕ್ತಿಗಾಗಿ ಮನುಷ್ಯ ಯಾವ ಮಠ ಮಂದಿರ ಯಾತ್ರೆಗಳನ್ನೋ ಆಧರಿಸಬೇಕಿಲ್ಲ. ಮನಸ್ಸೇ ಆತನ ಎಲ್ಲ ಭಾವ ವಿಚಾರ ಅನುಭವಗಳನ್ನು ಪಾಕಗೊಳಿಸುವ ಯೋಗ್ಯ ವಿದ್ಯಾಲಯವಾಗುತ್ತದೆ. ’ಅಂತರತಮ ನೀ ಗುರು ಹೇ ಆತ್ಮತಮೋಹಾರಿ’ ಎಂಬ ಕವಿನುಡಿಯಂತೆ ಅಂತರಂಗದ ಬೆಳಕೇ ಒಳಹೊರಗಿನ ಜೀವನವನ್ನು ಬೆಳಗಿ ಮಾರ್ಗದರ್ಶಕವಾಗುತ್ತದೆ. ಶ್ರೀ ರಾಮಕೃಷ್ಣರು ಹೇಳುತ್ತಾರೆ ’ಸಾಧಕ ಮೊದಮೊದಲು ಬಹೂದಕನಾಗುತ್ತಾನೆ, ಜ್ಞಾನವು ಬಲಿತಂತೆಲ್ಲ ಕುಟೀಚಕನಾಗುತ್ತ ಬರುತ್ತಾನೆ’ ಎಂದು. ಈ ಮಾತಿನ ಅರ್ಥ ಮೊದಮೊದಲು ಸಾಧಕ ಬಹೂದಕ (ಬಹಳ ಕಡೆ ನೀರು ಕುಡಿಯುವವನು) ಅರ್ಥಾತ್ ತುಂಬ ಅಲೆದಾಡಿ, ಅವರಿವರನ್ನು ಬಳಿಸಾರಿ, ಮಾತನಾಡಿಸಿ, ಬಹಿರ್ಮುಖವಾಗಿ ಜ್ಞಾನವನ್ನು ಅರಸುತ್ತಾನೆ. ಆದರೆ ತನ್ಮೂಲಕ ಲೋಕಾನುಭವ ಹಾಗೂ ಅಂತರ್ದೃಷ್ಟಿಗಳು ಬಲಿಯುತ್ತ ಹೋದಂತೆ ಆತ ಕೊನೆಕೊನೆಗೆ ಕುಟೀಚಕನಾಗುತ್ತಾನೆ (ಕುಟೀರವಾಸಿಯಾಗುತ್ತಾನೆ) ಅರ್ಥಾತ್ ಒಂದೆಡೆ ನೆಲೆ ನಿಲ್ಲುತ್ತಾನೆ, ತನ್ನೊಳಗೆ ತಾನು ತಾತ್ವಿಕ ನೆಲೆಯನ್ನು ಕಂಡುಕೊಳ್ಳುತ್ತಾನೆ. ಪ್ರಾರಂಭವು ಬಹಿರಂಗದಲ್ಲಾದರೂ ನಿಶ್ಚ್ವಯವು ಅಂತರಂಗದಲ್ಲಿ ಧ್ಯಾನದಲ್ಲೇ ಸಿದ್ಧಿಸಬೇಕು.
ಮನಸ್ಸನ್ನು ದುಃಖದುಮ್ಮಾನಗಳ ಪಾಶದಿಂದ ಬಿಡಿಸಿ ನಿರ್ಮಲ ತಾತ್ವಿಕ ಅನುಭವಾನಂದದ ಎತ್ತರಕ್ಕೆ ಏರಿಸುವ ಸನಾತನ ಆರ್ಷ ಸಂಸ್ಕೃತಿಯ ನೈಜ ಉದ್ದೇಶವನ್ನು ಅರಿತುಕೊಂಡಾಗಲೇ ಅದರ ಸ್ವಾರಸ್ಯ ನಮಗೆ ವೇದ್ಯವಾದೀತು, ಅದರಲ್ಲಿನ ಹೃದ್ಯ ಸ್ವೀಕಾರ್ಯಾಂಶಗಳು ಸ್ಪಷ್ಟವಾದಾವು. ಕಾಲೋಚಿತವಾಗಿ ಅನ್ವಯಮಾಡಿಕೊಳ್ಳುವ ವಿವೇಕವೂ ಉದಿಸೀತು. ಇಲ್ಲದಿದ್ದಲ್ಲಿ ಮುಗ್ಧ ಭಯ ಮಿಶ್ರಿತ ನಂಬಿಕೆಯಷ್ಟೆ ಉಳಿದೀತು ಅಥವಾ ಎಲ್ಲವನ್ನೂ ದೋಷದೃಷ್ಟಿಯಿಂದಲೇ ಕಾಣುವ ಪರಕೀಯರು ಕೊಟ್ಟ ಕಾಮಾಲೆಯ ಕಣ್ಣು ಮಾತ್ರ ಉಳಿದೀತು, ನಮ್ಮ ಸಂಸ್ಕೃತಿಯ ನೈಜಸ್ವಾರಸ್ಯ ಹಾಗೂ ಸತ್ವಗಳು ನಮ್ಮಿಂದ ಮರೆಯಾಗಿಯೇ ಉಳಿದಾವು.

ಸೋಮವಾರ, ಡಿಸೆಂಬರ್ 12, 2011

ಬಾಡಿದ ಸುಮವೆ

ಬಾಡಿದ ಸುಮವೆ
(ಹಿಂದಿಯಲ್ಲಿ ಮಹಾದೇವಿ ವರ್ಮಾರವರ ಮುರ್ಝಾಯಾ ಫೂಲ್ ಎಂಬ ಪ್ರಸಿದ್ಧ ಕವಿತೆಯ ಭಾವಾನುವಾದ )

ಅಂದು ಎಳೆ ಮೊಗ್ಗಾಗಿ ಅರಳಿದೆ ಇಂದು ಬಾಡಿಹ ಕುಸುಮವೆ |
ಪವನನಾ ದಿನ ನಿನ್ನ ಮಡಿಲಲಿ ಧರಿಸಿ ನಗಿಸಿದನಲ್ಲವೆ ? ||
ಅರಳಿ ನಿಂತಾಗಂದು ನೀ ಸುಮ ಕೋಮಲಾಂಗವು ಉದಿಸಿತು |
ನಿನ್ನ ಮಧುವಿನ ಲೋಭದಲಿ ಗುಂಯ್ಗುಡುತ ದುಂಬಿಯು ಬಳಸಿತು ||

ಸ್ನಿಗ್ಧಕಿರಣಗಳಿಂದ ಚಂದ್ರನು ನಿನ್ನ ನಗಿಸುತ ಒಲಿಸಿದ |
ಮುತ್ತುಗಳ ಮಳೆಗರೆದು ನಿನ್ನನು ಇರುಳಿನಲು ಉಪಚರಿಸಿದ ||
ದುಂಬಿಗಳು ಝೇಂಕಾರಗೈಯುತ ಹಾಡೆ ಲಾಲಿಯ ಹಾಡನು |
ಯತ್ನದಿಂದಲಿ ತೋಟಗಾರನು ನಿನ್ನ ಪಾಲಿಸಿ ನಲಿದನು ||

ಬಾಳ ತೋಟದಲಿಂತು ಕಣ್ಣಾಮುಚ್ಚಲಾಟವನಾಡಿರಲ್ |
ಕೊಟ್ಟ ಕೊನೆಗೀ ದೃಶ್ಯ ಬಂದೀತೆಂದು ಇತ್ತೇನ್ ಧ್ಯಾನದೊಳ್? ||
ಒರಟು ನೆಲದಲಿ ಇಂದು ಮಲಗಿಹೆ ಸುಮವೆ ಜರೆ ಬಂದಪ್ಪಲು |
ಗಂಧ ಕೋಮಲತೆಗಳು ಮುಖಸಿರಿಯೆಲ್ಲ ಸೊರಗಿವೆ ಬಾಡಲು ||

ಇಂದು ನಿನ್ನನ್ನು ನೋಡಿ ದುಂಬಿಗಳರಸಿ ಬಾರವು ಆಸೆಯೊಳ್ |
ಮೂಡಣದ ಸಿರಿಗೆಂಪು ಸೊಗವನು ವರ್ಷಿಸದು ನಿನ ಲಾಲಿಸಲ್ ||
ಎತ್ತಿ ನಿನ್ನನು ಉಯ್ಯಲ್ಲಾಡಿಸಿದಂಥ ಪವನನೆ ನಿನ್ನನು |
ತೀವ್ರತರದಾಘಾತದಿಂದಲಿ ನೆಲಕೆ ಬೀಳಿಸಿ ನಕ್ಕನು ||

ಬಿಡದೆ ನಿನ್ನಯ ಮಧುಸುಗಂಧವ ದಾನಕೊಟ್ಟಿಹೆಯಲ್ಲವೆ? |
ಆದರೂ ನಿನಗಾಗಿ ಅಳುವವರಾರು ದಾನೀಕುಸುಮವೆ ? ||
ದುಃಖಪಡದಿರು ಪುಷ್ಪವೇ ! ಪೇಳಾರಿಗಿತ್ತಿಹ ಸುಖವನು ? |
ಜಗದೊಳೆಲ್ಲರ ಸ್ವಾರ್ಥಮಯರನ್ನಾಗಿಸಿರುವನು ಕರ್ತನು ||

ವಿಶ್ವದಲಿ ಹೇ ಪುಷ್ಪವೇ ನೀನೆಲ್ಲರೆದೆಯನು ಬೆಳಗಿದೆ |
ಸರ್ವವನು ಬಲು ದಾನಗೈಯುತ ಜಗದಿ ಹರ್ಷವ ಬಿತ್ತಿದೆ ||
ನಿನ್ನ ಇಂದಿನ ದೆಸೆಯ ಕಂಡು ದುಃಖಿಸಿತೆ ಪೇಳ್ ವಿಶ್ವವು? |
ಯಾರು ನಮಗಾಗಳುವರವನತಿಕಾಲದಲ್ಲಹ ಚಿತ್ರವು||

हिंदी मूल कविता – मुर्झाया फूल- रचना- महादॆवी वर्मा

था कली के रूप शैशव मे अहॊ सूखे सुमन |
हास्य कर्ता था खिलाती अंक मे तुझ्कॊ पवन ||
खिल गया जब पूर्ण तू मंजुल सुकॊमल पुष्प बन |
लुब्ध मधु के हॆतु मंडराते लगे उडते भ्रमर ||

स्निग्धकिरणे चंद्र की तुझ्कॊ हसाती थी सदा |
रात तुझ पर बारती थी मॊतियॊ की संपदा ||
लॊरिया गाकर मधुप निद्राविवश करते तुझे |
यत्न माली का रहा आनन्द से भरता तुझे ||

कर रहा अठ्खॆलियां इतरा सदा उद्यान में |
अंत का ये दॄश्य आया था कभी क्या ध्यान मे ? ||
सॊ रहा अब तू धरा पर शुष्क बिखराया हुआ |
गंध कॊमलता नही मुखमंजु मुर्झाया हुआ ||

आज तुझकॊ दॆख कर चाहक भ्रमर आता नही |
लाल अपना राग तुझ पर प्रात भरसाता नही ||
जिस पवन नॆ अंक मे लॆ प्यार था तुझकॊ किया |
तीव्र झॊके से सुला उसने तुझे भू पर दिया ||

कर दिया मधू और सौरभ दान सारा ऎक दिन |
किंतु रॊता कौन है तेरॆ लिये दानी सुमन ||
मत व्यथित हॊ फूल, किसकॊ सुख दिया संसार ने ? |
स्वार्थमय सबकॊ बनाया है यहां कर्तार ने ||

विश्व मे हॆ पुष्प तू! सबकॆ हृदय भाता रहा |
दान कर सर्वस्व फिर भी हाय! हर्षाता रहा ||
जब न तॆरी ही दशा पर दुःख हुआ संसार कॊ |
कौन रॊयॆगा सुमन हम से मनुज निःसार कॊ ? ||

Some memoirs of Amma’s story sessions

Some memoirs of Amma’s story sessions
It began when I was hardly 5 years old. Everyday after returning from school, amma would treat me and my elder sister Anitha each to a glass full of warm milk. As we sipped on, sitting on the door steps, amma would beautifully unfold a story from history or mythology. Shastry, (my brother), a typical carefree teenager then, would keep away from such narrations feeling he was too grown up to listen to them. Anyway, he would steal into the lines here and there only to use them to tease us later on.
Amma’s style of narration was wonderful. We would both listen on holding our breath, as she would, with suitable facial expressions and hand gestures, go on narrating. Gods, demons, sages, kings, devotees, princesses, horses, elephants, deer, rivers, hills, lakes, villages, heavens, hells or patriots, heroes, saints of yester years, would come alive before our eyes. Amma would take us into a colourful world where everything was ultimately idealistic and Eutopian! She took care to ensure we heard only the best and positive ones. Even when the stories were about villains and demons, the final end would nevertheless be ‘victory of good over evil’.
The pouranic princesses and goddesses in particular captured my imaginations. There was never a princess or goddess or heroine in amma’s stories who did not fit into the ‘rosy cheeks, black large eyes, lovely long curly hair, slim waists, delicate limbs, fair and lovely skin---” mould! Amma would describe their gorgeous sarees, glittering ornaments, divinely fragrant flowers on their tresses and the never fading blush on their faces---Some of the princesses, usually in their youthful teens, would await passionately the arrival of their chosen love, some rajakumara who would come on a horseback, to free and carry them away to safety from some demon or villain. As I would listen on with excitement and anxiety, I would myself become ‘The princess’ breathing heavily and sighing with relief only when the ‘rajakumar’ came to rescue! If the ‘to be continued---’ end came before the rajakumara came to the rescue, I would restlessly follow amma to every corner she walked asking whether the rajakumara ‘would surely come’ and rescue her. Amma, was clever enough to never break the suspense about what happened next. But with due consideration for my desperation, she would assure me that good people would always see a happy end. I still remember the moments when I would even resort to prayers seeking for the safety of the princess in trouble!
In Amma’s stories, the rajakumara’s or heroes were always the ever youthful, wise, valorous, adventurous and noble models. A speedy horse, befitting dress, broad chest and bulging biceps would never be missing in any of them. If by chance amma missed out mentioning any of these ‘mandatory’ descriptions, I could not help interfering to ask and ensure that he ‘had’ them all. In amma’s stories, the hero was not necessarily always born rich. But he would certainly be someone who has that ‘extraordinary something’ that keeps the heroine awaiting him.
Amma’s depictions of sages and saints, heroes or soldiers, their forbearance, will power, heroism and perseverance in sticking to their ideals used to be very effective. As amma propounded them with suitable strong emphatic words and expressions, my backbone would straighten and I could feel the veera rasa gush up within my blood and ignite heroic dreams in me!
These were the days when I probably developed a fascination for listening to and telling stories. Amma’s stories would go on as we held on to our glasses of milk, forgetting to sometimes even to gulp what we sipped. Nana’s (my father) arrival from office would put an abrupt end to our fascinating journey ----which would stop for the day with the words “---to be continued----”. As nana arrived, Amma, with a sense of pativrata dharma (wifehood) would rush to the kitchen to attend to his coffee and snacks and they both would sit talking about the day. Me and Anitha had to gulp our disappointment along with the remaining milk. However revision of the day’s story would go on religiously between me and Anitha in between our home work and dinner sessions. If I sometimes felt disturbed for what some demon did to a noble hero or heroine, Anitha overwhelming with vatsalya would lovingly hold me in her arms, comfort and assure me that ‘Panduranga’ would rescue them and amma would tell about how everything would end well.
Thus through amma’s endless stories, a new pouranic or historic figure would incarnate everyday into the world of my imagination. The story would linger on and on in me. I could not contain it and had to blurt it out to someone. My primary school was 10 minutes walk to home. We were 6 girls living in the same neighbourhood. I used to unwrap the stories for them as we walked to and from school to home. I would begin narrating the stories believing that they all were indeed willing to listen. Fortunately, none of them seemed to be ‘not interested’ in my stories. Soon I was a well known ‘little storyteller’ in the school and neighbourhood. If any class in the school had a free session, I would be taken there to narrate and I would do it too happily. Teachers would also sit and listen in amusement at my prattle. At my dance class, I would somehow form a small gang and unwrap amma’s stories to them too. This continued even when I changed school.
This was when my taste for narration and description began to sprout. I could see myself narrating amma’s fascinating stories not just as I heard them but by adding my own spice and colour to them all. I would never forget to stop here and there to enlighten my listeners about the neeti aspect of the episode or situation which were again amma’s reflections.
Amma’s stories opened up in me a genuine taste for the ‘beautiful and noble’. Little did I realize then that they were all not just stories to ‘hear and forget’ but would stay on within me forever! I wonder now at how they come to my mind effortlessly when I need to expound something somewhere—be it during simple conversations, or my discourses or my classes, or even my professional training sessions. Boundless, as they are, by region, time or religion, and being rich with values and attitudes that enrich life, these stories and characters come to me anywhere I need them.
Amma is one of the best story tellers I have ever known. But we, her children and some close friends, were probably the only benefactors of her narrating talents. They otherwise remained undisclosed to the world. There are fewer instances now when she sits by to narrate stories or episodes. Moreover the spice of hand and face gestures are usually missing during her narrations. Probably because we too, obviously ‘bad grown ups’, don’t display the innocent twinkle and curiosity that we used to do years ago. Amma’s voracious reading keeps her abreast of something new, interesting and inspiring. And she cant help sharing it with someone immediately after. My father is usually the first one she grasps to narrate and then any of us, who is available, if not in person at least on phone!
I confess, I have adopted exactly the same style, I get to catch on my husband or some friend immediately to empty my stocks of stories or episodes or something special that I see, read or hear! Many a time I even fail to see if they have the time or even interest to listen! But nevertheless, so far my listeners have all displayed the patience to bear with my prattle all the time! Not that there are no occasions when I repeat what I would have already told a dozen of times. A mischievous hand gesture (but never a verbal reminder or a boring look) of my husband usually suggests that it is the ----th time I am narrating the same! But believe me, even then, many a time, I can’t help continue, ofcourse in a fast-forward mode, what I have started saying. Call it my strength or weakness, I can probably never give an abrupt and injustified end to a story or episode I consider dear and valuable.

ಗುರುವಾರ, ಡಿಸೆಂಬರ್ 8, 2011

गुरुस्तुतिः

a sanskrt verse on guru composed on gurupournami day 2008
गुरुस्तुतिः

गर्भबन्धादज्ञताया मॊक्ष्यते यॆन मातृवत् |
ज्ञानं संजायते तॆन तस्मै श्रिगुरवॆ नमः ||

(ತಾಯಿಯು ಗರ್ಭದಲ್ಲಿನ ಬಂಧನದಿಂದ ಮಗುವನ್ನು ರಕ್ಷಿಸಿ ಹೊರತೆಗೆಯುವಂತೆ, ಅಜ್ಞಾನದ ಬಂಧನದಿಂದ ಹೊರತೆಗೆದು ಜ್ಞಾನವನ್ನು ಉಂಟುಮಾಡುವ ಮಾತೃಸದೃಶನಾದ ಗುರುವಿಗೆ ನಮಸ್ಕಾರ).

ಬುಧವಾರ, ಡಿಸೆಂಬರ್ 7, 2011

ಗೌರೀ ಗಣೇಶ ಸ್ವಾರಸ್ಯ

ಗೌರೀ ಗಣೇಶ ಸ್ವಾರಸ್ಯ
ಗೌರಿಯನ್ನು ಮನೆಮಗಳು ಎಂದು ಭಾವಿಸಿ ಪ್ರತಿವರ್ಷವೂ ಆಹ್ವಾನಿಸಿ ಉಡಿತುಂಬಿಸುವುದು ಈ ಹಬ್ಬದ ವಿಶೇಷ. ಗೌರೀ ಎಂದರೆ ’ಬೆಳ್ಳಗಿರುವವಳು’ ಅಥವಾ ’ತೇಜಸ್ವಿನಿ’ ಎಂದರ್ಥ. ಜ್ಞಾನ, ಪರಾಕ್ರಮ, ಐಶ್ವರ್ಯಾದಿ ವೈಭವಗಳನ್ನು ತನ್ನೊಳಗೆ ಅಡಗಿಸಿಕೊಂಡು ಸೌಮ್ಯ ರೂಪದಿಂದ ನಿಲ್ಲುವಳು ಗೌರೀ. ಆದರೆ ದುಷ್ಟರ ದಮನ ಹಾಗೂ ಶಿಷ್ಟರ ರಕ್ಷಣೆ ಮಾಡಬೇಕಾದಾಗ, ಆಕೆಯೇ ದುರ್ಗೆ-ಕಾಳಿ ರೂಪಗಳನ್ನು ತಾಳಿ ತನ್ನ ಶಕ್ತಿಯನ್ನು ವ್ಯಕ್ತವಾಗಿ ಮೆರೆಸುತ್ತಾಳೆ. ಅನಂತ ಶಕ್ತಿಯು ಶಾಂತಿಯ ಸೀಮೆಯೊಳಗಿದ್ದು ಕಾಲೋಚಿತವಾಗಿ ಪ್ರಕಟವಾಗಬೇಕೆನ್ನುವುದನ್ನು ಗೌರಿಯು ಈ ಮೂಲಕ ಕೊಡುತ್ತಿರುವ ಸಂದೇಶವೆನ್ನಬಹುದು. ನಿಸರ್ಗ ಸಹಜವಾಗಿ ಹೆಣ್ಣು ನಾಚಿಕೆ ಹಾಗೂ ನಾಜೂಕಿನವಳಾದರೂ, ಕಷ್ಟಕಾಲದಲ್ಲಿ, ಶೀಲರಕ್ಷಣೆ, ಪರಿವಾರ ಪಾಲನೆ ಪೋಷಣೆಗಳನ್ನು ಮಾಡುವಾಗ ಅತಹ್ವಾ ನ್ಯಾಯಕ್ಕಾಗಿ ಹೋರಾಡುವಾಗ ಶಕ್ತಿ-ಯುಕ್ತಿಗಳನ್ನು ಮೆರೆಯಬಲ್ಲಳು ಎನ್ನುವುದು ಇಲ್ಲಿನ ಧ್ವನಿ.
ಗೌರಿಯು ವಿರಾಗಿಯಾದ ತನ್ನ ಪತಿಯಲ್ಲಿನ ಅತಿಶಯ ಪ್ರೇಮದಿಂದ ಸಕಲ ವೈಭವಗಳನ್ನು ತೊರೆದು ’ಬಿಚ್ಚೋಲೆ ಗೌರಮ್ಮ’ ಎನಿಸಿದಳು. ಆದರೆ ತನ್ನ ಮಗನಾದ ಗಣಪನಿಗೆ ಅನ್ಯಾಯವಾಗಿ ಶಿರಚ್ಛೇದನವಾದಾಗ ಮಾತ್ರ ಮುನಿದು ನಿಂತಳು. ಶಿವನ ಜೊತೆಗೆ ಸಮಸ್ತ ದೇವತಾಗಣವು ಗಣಪನಲ್ಲಿ ತಪ್ಪೊಪ್ಪಿಗೆ ಮಾಡಿಕೊಂಡು, ಅವನಿಗೆ ಬೇರೊಂದು ಶಿರವನ್ನೂ, ಅಸಾಧಾರಣ ವರಗಳನ್ನೂ ಕೊಡುವ ತನಕ ಸುಮ್ಮನಾಗಲಿಲ್ಲ. ಹೀಗೆ ಗೌರಿಯು ಶಾಂತಿ ಹಾಗೂ ಶಕ್ತಿಗಳ ಸುಂದರ ಸಮರಸ-ಮೂರ್ತಿಯಾಗಿ ನಿಲ್ಲುತ್ತಾಳೆ.
ಗೌರಿಯು ಸೌಮಂಗಲ್ಯವನ್ನು, ದಾಂಪತ್ಯ ಸುಖವನ್ನೂ, ಪ್ರಸಾದಿಸುವಳೆಂದು ನಂಬಿಕೆ. ಸೌಭಾಗ್ಯಗೌರೀ, ಸಂಪದಗೌರೀ, ಮಂಗಳಗೌರೀ, ಲಾವಣ್ಯಗೌರೀ, ತ್ರಿಲೋಚನಗೌರೀ, ಕೇದಾರಗೌರೀ ಮೌನಗೌರೀ, ಸೀಗೆಗೌರೀ, ಚೈತ್ರಗೌರೀ. ಗಜಗೌರೀ, ಕಾತ್ಯಾಯನೀ ವ್ರತ ಮುಂತಾದ ಹಲವು ಗೌರ್ರೀ ವ್ರತಗಳಿವೆ. ಆಯಾ ಪ್ರಾತಗಳಲ್ಲಿ, ಕುಲಗಳಲ್ಲಿ, ಆಯಾ ಗೌರೀ ವ್ರತ ಪ್ರಚಲಿತವಿದೆ. ಆದರೆ ನಮ್ಮ ಕರ್ನಾಟಕದಲ್ಲಿ, ಅದರಲ್ಲೂ ಮಧ್ಯ ಹಾಗೂ ದಕ್ಷಿಣ ಕರ್ಣಾಟಕದ ಜಿಲ್ಲೆಗಳಲ್ಲಿ ಸ್ವರ್ಣಗೌರಿಯೇ ವ್ಯಾಪಕವಾಗಿ ಪ್ರಚಲಿತವಾಗಿದೆ.
ಗೌರಿಯನ್ನು ವಿಧಿಯುಕ್ತವಾಗಿ ಕೆರೆಯೆ ಮಣ್ಣಿನ, ಅರಶಿನ ಅಥವಾ ಬಂಗಾರದ ವಿಗ್ರಹದಲ್ಲೋ ಆವಾಹಿಸಿ ಷೋಡಶೋಪಚಾರಗಳ ಮೂಲಕ ಪೂಜಿಸಲಾಗುತ್ತದೆ. ಮರದ ಬಾಗಿನ, ದೋರಬಂಧನ ತಾಂಬೂಲ ವಿನಿಮಯಾದಿಗಳು ಈ ಹಬ್ಬದ ವೈಶಿಷ್ಟ್ಯಗಳು. ಮನೆಮಗಳು ಅಳಿಯಂದಿರನ್ನು ಹರ-ಗೌರಿಯ ಪ್ರತಿನಿಧಿಗಳೆಂದು ಭಾವಿಸಿ ಆದರಾತಿಥ್ಯಗಳನ್ನು ನೀಡುವುದು ವಾಡಿಕೆಯಲ್ಲಿದೆ. ಈ ಪ್ರಾಂತದಲ್ಲಿ ನೈವೇದ್ಯದಲ್ಲಿ ಸಾಮಾನ್ಯವಾಗಿ ಹರಿದ್ರಾನ್ನ(ಅರಿಶಿನ ಹಾಕಿದ ಅನ್ನ/ ಚಿತ್ರಾನ್ನ), ಮುದ್ಗಾನ್ನ (ಹೆಸರುಬೇಳೆ ತುಪ್ಪಗಳೊಂದಿಗೆ ಪಾಕವಾದ ಅನ್ನ/ ಖಿಚಡಿ)ಗಳು ಇದ್ದೇ ಇರುತ್ತವೆ. ಮನೆಯ ಹೆಣ್ಣುಮಕ್ಕಳನ್ನು, ಬಂಧುಬಳಗದ ಅಥವಾ ನೆರೆಕೆರೆಯ ಸುಮಂಗಲಿಯರನ್ನು ಆಹ್ವಾನಿಸಿ ಮರದ ಬಾಗಿನ, ಮಂಗಳದ್ರವ್ಯಗಳು, ತಾಂಬೂಲ, ಭೋಜನ, ದಕ್ಷಿಣೆ, ಕಾಣಿಕೆಗಳಿಂದ ಸತ್ಕರಿಸಲಾಗುತ್ತದೆ. ಸಾಯಂಕಾಲ ಪರಸ್ಪರರ ಮನೆಗೆ ಹೋಗಿ ಅಲಂಕರಿಸಿದ ಗೌರಿಯನ್ನು ನೋಡಿ, ನಮಿಸಿ, ಹಾಡು-ಕೋಲಾಟಗಳ ಸೇವೆಯನ್ನು ಒಪ್ಪಿಸುವುದುಂಟೂ. ಆದರೆ ನಾಗರೀಕತೆಯ ಬಿಂಕವು ಈ ಹಾಡು-ಕುಣಿತಗಳ ಸಂಪ್ರದಾಯವನ್ನು ಈಚಿನ ದಿನಗಳಲ್ಲಿ ಮರೆಸುತ್ತಿದೆ ಎನ್ನಿ. ಆದರೂ ಇದು ಹೆಂಗಸರ ಹಬ್ಬವಾದ್ದರಿಂದ ಹೆಚ್ಚು ವರ್ಣರಂಜಿತ! ಜರತಾರಿ ಸೀರೆ, ಒಡವೆ, ಮಂಗಳದ್ರವ್ಯಗಳು, ಅಲಂಕಾರ, ರಂಗೋಲಿ, ಸಡಗರ, ಸಂಭ್ರಮಗಳಲ್ಲೆಲ್ಲ ನಾರೀ ಮಣಿಯರ ಕಲಾಭಿಜ್ಞತೆ ಎದ್ದು ಕಾಣುತ್ತದೆ.
ಇನ್ನು ಗಣಪತಿ ಎಂದರೆ ’ಗಣ’ಕ್ಕೆ (ದೇವತಾ ಸಮೂಹಕ್ಕೆ) ಒಡೆಯ ಎಂದರ್ಥ. ಅವನು ಒಲಿದರೆ ಎಲ್ಲ ದೇವತೆಗಳು ಒಲಿಯುತ್ತಾರೆ. ಗಣಪತಿಯ ಮುಗ್ಧ-ವಿಲಕ್ಷಣ ರೂಪ ಮಕ್ಕಳಿಗಂತೂ ಬಲು ಇಷ್ಟ. ಆ ರೂಪದಲ್ಲಿ ಅಡಗಿರುವ ಸಂಕೇತಗಳು ಅನೇಕ. ಗಣಪನ ದೊಡ್ಡ ಕಿವಿಗಳು ಅವನು ಬಹುಶ್ರುತ ವಿದ್ವಾಂಸ ಎನ್ನುವುದನ್ನು ಸೂಚಿಸಿದರೆ, ಆತನ ಉದ್ದನೆಯ ಸೊಂಡಿಲು ಸತ್ಯವನ್ನು ಒಳಹೊಕ್ಕು ನೋಡುವ ಜಿಜ್ಞಾಸೆಯ ಸ್ವಭಾವವನ್ನು ತೋರುತ್ತದೆ. ಬ್ರಹ್ಮಾಂಡವನ್ನೇ ಉದರದಲ್ಲಿ ಧರಿಸಿರುವನೆಂಬುದನ್ನು ಆತನ ದೊಡ್ಡ ಹೊಟ್ಟೆ ಸಾರಿದರೆ, ಆ ಸಣ್ಣ ಕಣ್ಣುಗಳು ಪರತತ್ವದ ಅನುಸಂಧಾನದಲ್ಲಿನ ಆತನ ಏಕಾಗ್ರತೆ/focusನ್ನು, ಬಿಂಬಿಸುತ್ತವೆ. ಉಬ್ಬಿದ ಗಂಡಸ್ಥಳಗಳು ಆತನ ವೈಚಾರಿಕ ಹಾಗೂ ಭಾವನಾತ್ಮಕ ಶಕ್ತಿಗಳ (IQ ಹಾಗೂ EQ) ಪೂರ್ಣ ಹಾಗೂ ಸಮಪ್ರಮಾಣದ ವಿಕಾಸವನ್ನು ಸೂಚಿಸಿದರೆ, ಗಣಪನ ಬೃಹದಾಕಾರವು ಅವನ ಸೀಮೆಯರಿಯದ ಬ್ರಹ್ಮಸ್ವರೂಪವನ್ನು ಸೂಚಿಸುತ್ತದೆ. ಗಣಪನು ಇಲಿಯು ನಮ್ಮ ಚಂಚಲ ಹಾಗೂ ಚಪಲ ಸ್ವಭಾವದ ಮನಸ್ಸಿನ ಪ್ರತಿನಿಧಿ. ಅದರ ಮೇಲೆ ಆತನಿಗೆ ಪೂರ್ಣ ಒಡೆತನ. ನರಚೈತನ್ಯದ ಗತಿಯ ಪ್ರತೀಕವಾದ ಕುಂಡಲಿನೀ ಸರ್ಪವನ್ನು ತನ್ನ ಹೊಟ್ಟೆಗೆ ಸುತ್ತಿದ್ದಾನೆ. ಕೈಗಳಲ್ಲಿನ ಪಾಶದಿಂದ ಸಮಸ್ತ ಸೃಷ್ಟಿಯನ್ನು ಮಾಯೆಯಿಂದ ಬಂಧಿಸಿದ್ದು, ತನ್ನ ಅಂಕುಶದಿಂದ ಸದಾ ನಿಯಂತ್ರಿಸುತ್ತಾನೆ. ಅವಿಚಲ ಮಾತೃಭಕ್ತಿಯೇ ಗಣಪನ ತಪಸ್ಸು. ಅದರಿಂದಲೇ ಆತ ಅಮಿತ ಶಕ್ತಿವಿಭೂತಿಗಳನ್ನೆಲ್ಲ ಪಡೆದು ’ಆದಿಪೂಜಿತ’ನಾದ, ’ಗಣಪತಿ’ಯಾದ. ಮಾತೃಭಕ್ತಿಯ ಮಹಿಮೆಯನ್ನೂ ಸಾರುತಿದೆ ಗಣಪನ ದಿವ್ಯ ಚರಿತ್ರೆ. ಇನ್ನು ತಮ್ಮ ಕಾರ್ತಿಕೇಯನೊಂದಿಗೆ ಬ್ರಹ್ಮಾಂಡವನ್ನೇ ಸುತ್ತಿಬರಲು ಸ್ಪರ್ಢಿಸಿದಾಗ, ಜಾಣ ಗಣಪನು ತಾಯಿಯನ್ನೇ ಸುತ್ತಿಬಂದ. ಈ ಮೂಲಕ ’ಬ್ರಹ್ಮಾಂಡವೆಲ್ಲ ಪಿಂಡಾಂಡದಲ್ಲಿದೆ’ ಎಂಬ ತತ್ವವನ್ನು, ’ತ್ಯಾಯಿಯು ವಿಶ್ವದ ಬೇರೆಲ್ಲಕ್ಕಿಂತ ಮಿಗಿಲು’ ಎಂಬ ತಥ್ಯವನ್ನೂ, ’ಇದ್ದಲ್ಲಿಯೇ ಎಲ್ಲವನ್ನೂ ಸಾಧಿಸಬಹುದು’ ಎಂಬ ಯುಕ್ತಿಯನ್ನೂ ಸಾರಿದನು.
ಗಣಪತಿಯು ಹಾಸ್ಯರಸಕ್ಕೂ, ಗಣಿತವಿದ್ಯೆಗೂ, ಅಧ್ಯಾತ್ಮವಿದ್ಯೆಗೂ ಅಧಿಪತಿ. ಚಾತುರ್ಯ, ಕಾರ್ಯಕೌಶಲ, ವಿಘ್ನನಾಶ, ಶತ್ರುನಾಶ ಹಾಗೂ ಸಾಫಲ್ಯ-ಸಿದ್ಧಿಗಳನ್ನು ಪ್ರತಿಪಾದಿಸುವವನು ಅವನು. ಆದ್ದರಿಂದಲೇ ಎಲ್ಲ ಶುಭಕಾರ್ಯಗಳನ್ನೂ ಗಣಪನ ಪ್ರಾರ್ಥನೆಯೊಂದಿಗೆ ಪ್ರಾರಂಭಿಸುವುದು ಪದ್ಧತಿ.
’ತಾಯಿಯ ಮಾತಿಗೆ ಬದ್ದನಾಗಿ, ಶಿವನ ಕೋಪಕ್ಕೆ ಬಲಿಯಾಗಿ ತಲೆಯನ್ನು ಕಳೆದುಕೊಂಡಾಗ ಗಣಪನಿಗೆ ದೇವತೆಗಳು ಆನೆಯ ಮುಖವನ್ನು ತಂದಿಟ್ಟರು’ ಎನ್ನುವ ಪುರಾಣದ ಕಥೆಯೂ ನಮಗೆಲ್ಲ ಗೊತ್ತೇ ಇದೆ.
ಗಣಪತಿಯ ಈ ’ಗಜಮುಖ’ಕ್ಕೆ ತಾತ್ವಿಕ ವೈಶಿಷ್ಟ್ಯವೂ ಇದೆ. ನಮ್ಮೆಲ್ಲರಲ್ಲಿ ರಹಸ್ಯ ಚೈತನ್ಯವಾಗಿ ಅಡಗಿರುವ ಕುಂಡಲಿನನೀ ಶಕ್ತಿಯು ಜಾಗೃತವಾಗದಾಗ, ಗಜಕುಂಡಪ್ರದೇಶ ಎನಿಸಿಕೊಳ್ಳೂವ ಮೂಲಾಧಾರ-ಪದ್ಮದಲ್ಲಿ (ಬೆನ್ನೆಲುಬಿನ ಕೆಳಗಿನ ತುತ್ತತುದಿಯಲ್ಲಿ) ಮನೋಲಯವಾದಾಗ ಯೋಗಿಗಳಿಗೆ ಅಲ್ಲಿನ ದಿವ್ಯ ತ್ರಿಕೋನದ ಮಧ್ಯದಲ್ಲಿ ಗಜಮುಖದ ದರ್ಶನವಾಗುತ್ತದೆ. ಹೀಗೆ ಗಣಪತಿಯು ’ತ್ರಿಕೋನ-ಮಧ್ಯಗತ, ಗಜಮುಖ ಎಂದು ಪ್ರಸಿದ್ಧ.
ಲೌಕಿಕವಾಗಿ ಕಾಣುವ ಆನೆಯ ಆಕಾರವನ್ನು ಇದಕ್ಕೆ ಸಾಂಕೇತಿಕವಾಗಿ ಹೇಳಿದೆಯೇ ಹೊರತು, ಅಂತರಂಗದ ಗಜದ ಆಕಾರವು ವಸ್ತುತಃ ಪ್ರಣವದ ಒಂದು ಭಂಗಿ. ಆ ತಿರುವು ಬಲಕ್ಕೆ ಇದ್ದರೆ, ಆ ಶಕ್ತಿಯನ್ನು ’ಬಲಮುರಿಗಣಪತಿ’ ಎಂದು ಮೋಕ್ಷಸಿದ್ಧಿಗಾಗಿ ಆರಾಧಿಸಲಾಗುತ್ತದೆ. ಆ ತಿರುವು ಎಡಕ್ಕೆ ಇದ್ದರೆ ಐಹಿಕ ಭೋಗ, ವಿದ್ಯಾ, ಸಿದ್ಧಿ, ವೃದ್ಧಿ, ಬುದ್ಧಿ, ಹಾಗೂ ವಿಘ್ನನಿವಾರಣೆಗಾಗಿ ಆರಾಧಿಸಲಾಗುತ್ತದೆ.
ಅಧ್ಯಾತ್ಮ ಎನ್ನುವುದು ಅತ್ಯಂತ ವೈಯಕ್ತಿಕವಾದ ಅನುಭವವೇ ಹೊರತು, ಕೇವಲ ಚರ್ಚೆ ಉಪದೇಶಗಳಿಂದ ಸಿದ್ದಿಸದು. ಹಾಗಾಗಿ ತತ್ವ, ಪುರಾಣ, ಯೋಗಶಾಸ್ತ್ರಗಳು ಅಥವಾ ಅನುಭಾವಿಗಳ ಮಾತುಗಳು ಹಲವಾರು ವಿಚಾರಗಳನ್ನು ತಿಳಿಸಿದರೂ, ಅಲ್ಪಸ್ವಲ್ಪ ಅರ್ಥವಾದರೂ ಸಾಮಾನ್ಯರಾದ ನಮಗೆ ಎಲ್ಲವೂ ನಿಲುಕದೆ ಹೋಗಬಹುದು, ಸಂಶಯ, ಅರ್ಧಂಬರ್ಧ ತಿಳುವಳಿಕೆ ಅಥವಾ ಭಯಮಿಶ್ರಿತ ನಂಬಿಕೆಗಳೇ ಉಳಿದಾವು. ಏನೇ ಆಗಲಿ ಮುಗ್ಧವಾದರೂ ನಿರ್ಮಲ ಮನಸ್ಸಿನಿಂದ ಮಾಡಿದ ಯಾವುದೇ ಪುಣ್ಯಕಾರ್ಯವು ಮನಸ್ಸನ್ನು ಹಗುರಗೊಳಿಸಿ ಆನಂದವನ್ನಂತೂ ಕೊಡುತ್ತದೆ, ಬಂಧು ಬಳಗದೊಂದಿಗಿನ ಸಂಬಂಧಗಳು ಬಲಿಯುತ್ತವೆ, ಕಲೆ-ಸಂಸ್ಕೃತಿ-ದೇಶ-ಧರ್ಮಗಳು ಗಟ್ಟಿಯಾಗುತ್ತವೆ. ಹೀಗಾಗಿ ಅರಿತೋ ಅರಿಯದೆಯೋ ಮಾಡುವ ಇಂತಹ ಎಲ್ಲ ಹಬ್ಬ-ಹರಿದಿನಗಳೂ ಮನೋನ್ನತಿಯನ್ನೂ ಜೀವನದಲ್ಲಿ ಸೌಹಾರ್ದವನ್ನೂ, ಸಂತಸವನ್ನೂ ಉಂಟುಮಾಡುವುದರಲ್ಲಿ ಸಂಶಯವಿಲ್ಲ.
ಹಬ್ಬದ ಈ ಶುಭ ಸಂದರ್ಭದಲ್ಲಿ ಗೌರೀ-ಗಣಪತಿಯರು ನಮ್ಮ ವೈಯಕ್ತಿಕ, ಸಾಮಾಜಿಕ, ರಾಷ್ಟ್ರೀಯ ಹಾಗೂ ಜಾಗತಿಕ ಸಮಸ್ಯೆಗಳನ್ನು ಪರಿಹರಿಸಿ ಸುಖ-ಸಮೃದ್ಧಿಗಳನ್ನು ಕರುಣಿಸಲಿ.

೨೦೧೦ ವಷದ ಗೌಈ ಗಣೇಶ ಹಬ್ಬದ ಪ್ರಯುಕ್ತ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನದ ಕಿಂಚಿತ್ ಪರಿಷ್ಕೃತ ರೂಪ.